ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.

ಜಿ ಎನ್ ಮೋಹನ್

ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ‘ಏಕ’ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ ಕಳವಳಪಡುತ್ತಿದ್ದೆ. ಹೀಗೇಕೆ ಆಗುತ್ತಿದೆ? ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ನಾನೇ ಉತ್ತರ ಹುಡುಕುತ್ತಾ ಇದ್ದೆ.
ಆಗಲೇ ನಾನು ಮಾಧ್ಯಮ ರಂಗದ ಒಳಗೆ ಹೇಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಏಕರೀತಿಯ ಸಂವೇದನೆಗೆ ಮಾತ್ರ ಜಾಗ ಸಿಗುತ್ತಿದೆ ಎನ್ನುವುದನ್ನು ವಿವರಿಸುತ್ತಿದ್ದೆ. ಎಲ್ಲಿಯವರೆಗೆ ನಮ್ಮ ನ್ಯೂಸ್ ರೂಂಗಳು ಎಲ್ಲಾ ರೀತಿಯ ಜಾತಿ, ಎಲ್ಲಾ ರೀತಿಯ ಧರ್ಮ, ಎಲ್ಲಾ ಪ್ರದೇಶಗಳಿಗೆ ನೆಲೆ ಒದಗಿಸುವುದಲ್ಲವೋ ಅಲ್ಲಿಯವರೆಗೆ ಅದು ಏಕ ದೃಷ್ಟಿಕೋನವನ್ನು ಮಾತ್ರ ಹರಡುತ್ತಾ ಸಮಾಜ ವಿರೋಧಿಯಾಗುವ ಅಪಾಯವಿದೆ ಎಂದೆ.

ಹಾಗೆ ನಾನು ಇನ್ನೂ ಹೇಳಿ ಮುಗಿಸಿರಲಿಲ್ಲ, ಸಭಾಂಗಣದಲ್ಲಿ ಗುಜು ಗುಜು ಶುರುವಾಯಿತು. ಮಾತು ಮಥಿಸಲಾರಂಭಿಸಿದ್ದರು. ಆಗತಾನೆ ಪತ್ರಿಕೋದ್ಯಮ ಶಿಕ್ಷಣ ಪೂರೈಸಿ, ಮಾಧ್ಯಮ ಸಂಶೋಧನೆ ನಡೆಸುತ್ತಾ, ಪತ್ರಿಕೋದ್ಯಮವನ್ನು ಕಲಿಸುತ್ತಾ ಇದ್ದ ತರುಣನೊಬ್ಬ ಎದ್ದು ನಿಂತು, ಸಿಟ್ಟಿನಿಂದ ‘ಅಂದರೆ ನಿಮ್ಮ ಮಾತಿನ ಅರ್ಥ ಮಾಧ್ಯಮ ಅನುಭವ ಮಂಟಪ ಆಗಬೇಕು ಅಂತಾನಾ..?’ ಎಂದು ಪ್ರಶ್ನಿಸಿದ.

ತಕ್ಷಣ ನನಗೆ ನೆನಪಿಗೆ ಬಂದಿದ್ದು ದೇವನೂರು ಮಹಾದೇವ.

ಫ಼ ಗು ಹಳಕಟ್ಟಿ ಅವರ ‘ಶಿವಾನುಭವ ಶಬ್ದಕೋಶ’ ಓದಿದ ದೇವನೂರು ಮಹಾದೇವ ಅವರು ವಚನಕಾರರ ಬಗ್ಗೆ ಮಾತನಾಡುತ್ತಾ ಹೋಗಿರುವುದು ನನ್ನೊಳಗಿನ ಕಣ್ಣನ್ನು ಖಂಡಿತಾ ತೆರೆಸಿತ್ತು. “ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ; ಅದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು” ಎನ್ನುತ್ತಾ ಪ್ರತಿಯೊಬ್ಬ ವಚನಕಾರರಿಗೂ ಅವರ ಪ್ರಜ್ಞೆಯೇ ದೇವರಾಗಿತ್ತು ಎನ್ನುತ್ತಾರೆ. ಪ್ರಜ್ಞೆಯೇ ದೇವರು ಎಂದುಕೊಂಡಾಗಲೇ ಕಷ್ಟಗಳ ಸರಮಾಲೆ ಆರಂಭವಾಗುವುದು. ನೆತ್ತಿಯ ಮೇಲೆ ಸುಡುವ ಬೆಂಕಿ ಇಟ್ಟುಕೊಂಡಂತೆ. ತಮ್ಮ ಪ್ರಜ್ಞೆಯದುರು ಅವರು ಸುಳ್ಳು ಹೇಳಲು ಸಾಧ್ಯವೇ ಆಗುವುದಿಲ್ಲ. ಈ ಕಷ್ಟಕ್ಕೆ, ಇಕ್ಕಟ್ಟಿಗೆ ವಚನಕಾರರು ಮುಖಾಮುಖಿಯಾದರು ಎನ್ನುತ್ತಾರೆ.

ಹೌದಲ್ಲಾ, ಮಾಧ್ಯಮ ಎನ್ನುವುದು ಸುಳ್ಳು ಹೇಳಲಾಗದ, ಕಪಟ ಕುತಂತ್ರ ಅನುಸರಿಸಲಾಗದ ಪ್ರಜ್ಞೆಯನ್ನು ನೆತ್ತಿಯ ಮೇಲೆ ಇಟ್ಟುಕೊಳ್ಳುವ ಅನುಭವ ಮಂಟಪ ಯಾಕಾಗಬಾರದು? ಪ್ರತಿ ನಿತ್ಯ ತನ್ನ ಪ್ರಜ್ಞೆಗೆ, ಅಂತಃಸಾಕ್ಷಿಗೆ ಮುಖಾಮುಖಿಯಾಗುವ ಪರಿಸ್ಥಿತಿ ಮಾಧ್ಯಮಗಳಿಗೆ ಎದುರಾದರೆ ದೇವನೂರರೇ ಹೇಳುವ ಹಾಗೆ ಬಂಡೆಯ ಮೇಲೂ ಚಿಗುರೊಡೆಯಬಹುದಾದ ಕಾಲ ಬರುತ್ತದೇನೋ..

ದೇವನೂರು ಅವರ ಬಗ್ಗೆ, ಅವರ ಬರಹದ ಬಗ್ಗೆ ನಾನು ಗೆಳೆಯರೊಂದಿಗೆ ಪದೇ ಪದೇ ಚರ್ಚಿಸಿದ್ದೇನೆ. ಅವರ ಪ್ರಸ್ತುತತೆ ಏನು ಎನ್ನುವುದನ್ನು ನಿಕಷಕ್ಕೊಡ್ಡಿದ್ದೇವೆ. ನನಗಂತೂ ಅವರು ಇಂತಹ ಪ್ರಜ್ಞೆಯಾಗಿ, ಅಂತಃಸಾಕ್ಷಿಯಾಗಿಯೇ ಕಂಡಿದ್ದಾರೆ. ಹಿಂದೆ ಒಮ್ಮೆ ‘ಮಾಲು, ಬಾಲು’ ಸಾಹಿತ್ಯ ಚಿತ್ರರಂಗವನ್ನು ಬಿರುಗಾಳಿಯಂತೆ ಅವರಿಸಿಕೊಳ್ಳುತ್ತಿದ್ದ ಕಾಲದಲ್ಲಿ ‘ಇಂತಹ ಸಾಹಿತ್ಯ ಹೇಗೆ ಸಾಧ್ಯ?’ ಎಂದು ಚಿತ್ರ ಸಾಹಿತಿಯೊಬ್ಬರನ್ನು ಪ್ರಶ್ನಿಸಿದ್ದೆ. ಅವರು ‘ನಮ್ಮೊಳಗೊಬ್ಬ ಪೊಲೀಸು, ನಮ್ಮೊಳಗೊಬ್ಬ ನ್ಯಾಯಾಧೀಶ ಇರುತ್ತಾನೆ. ಅವನನ್ನು ಕೊಂದುಕೊಂಡ ಕ್ಷಣ ಇಂತಹ ಸಾಹಿತ್ಯ ಹುಟ್ಟುತ್ತದೆ’ ಎಂದಿದ್ದರು. ನನಗೆ ದೇವನೂರು ಹಾಗೆ ಕಂಡಿದ್ದಾರೆ. ನಮ್ಮೊಳಗಿನ ಪೊಲೀಸ್, ನಮ್ಮೊಳಗಿನ ನ್ಯಾಯಾಧೀಶ, ನಮ್ಮೊಳಗಿನ ಅಂತಃಸಾಕ್ಷಿಯಾಗಿ.

ದೇವನೂರು ನನಗೆ ತೀರಾ, ತೀರಾ ಹತ್ತಿರವಾಗಿರುವುದು ಅವರ ಸಾಹಿತ್ಯಕ್ಕಿಂತಲೂ ಹೆಚ್ಚು ಅವರ ಚಿಂತನೆಗಳ ಮೂಲಕ. ಬಹುಷಃ ನಾನು ನಡೆದುಬಂದ ದಶಕಗಳು ಎದುರಿಸುತ್ತಿದ್ದ ಬಿಕ್ಕಟ್ಟುಗಳಿತ್ತಲ್ಲಾ, ಅದಕ್ಕೆಲ್ಲಾ ದೇವನೂರು ಒಂದು ರೀತಿಯಲ್ಲಿ ಉತ್ತರ ಒದಗಿಸುತ್ತಾ ಹೋಗಿದ್ದರು. ನಾವು ಎದುರಿಸುತ್ತಿದ್ದ ಪ್ರಶ್ನೆಗಳು ಅವರ ಪ್ರಶ್ನೆಗಳೂ ಆಗಿತ್ತು. ಇಥಿಯೋಪಿಯಾದ ಹಸಿವಿನ ಸಾವುಗಳಿಂದ ಹಿಡಿದು ಕಾನ್ಶಿರಾಂ, ಮಾಯಾವತಿ ಬಿಜೆಪಿ ಜೊತೆ ಕೈಗೂಡಿಸಿದ್ದರವರೆಗೆ, ಕನ್ನಡ ಸಾಹಿತ್ಯ ಪರಿಷತ್ ನಿಂದ ಹಿಡಿದು ಕೋಣ ಬಲಿಯವರೆಗೆ…

ಅದೇಕೋ ಗೊತ್ತಿಲ್ಲ. ಬಹುಷಃ ನಾನು ಒಡನಾಡಿದ ಸಂಘಟನೆಗಳ ಪರಿಣಾಮವಿರಬೇಕು, ನಾನು ಅಂತರಾಷ್ಟ್ರೀಯ ವಿದ್ಯಮಾನಗಳಿಗೆ ತೆರೆದುಕೊಳ್ಳುತ್ತಾ ಹೋದೆ.

ಹಾಗೆ ತೆರೆದುಕೊಳ್ಳವುದು ಎಂದರೆ ಗ್ಲೋಬಿನ ಉದ್ದಗಲದ ನೋವುಗಳಿಗೆ ಮೈಯಾಗುವುದು ಎಂದೇ ಅರ್ಥ. ವಿಯೆಟ್ನಾಂ, ಲೆಬನಾನ್, ದಕ್ಷಿಣ ಆಫ್ರಿಕಾ, ಸೋವಿಯತ್ ದೇಶ, ಕ್ಯೂಬಾ, ರೊಮೇನಿಯಾ.. ಹೀಗೆ ಎಷ್ಟೊಂದು ದೇಶಗಳು ನನ್ನೊಳಗೆ ಅರಳಿ ನಿಲ್ಲುತ್ತಿದ್ದವು. ಅಗಲೇ ಒಡೆದು ಕಂಡಿದ್ದು ಇಥಿಯೋಪಿಯಾದ ಸಾವು. ಪತ್ರಿಕೆಗಳು ಹದ್ದುಗಳ ಹಿಂಡು ಮೂಳೆ ಚಕ್ಕಳೆಗಳ ದೇಹಗಳನ್ನು ಕುಕ್ಕುತ್ತಿರುವ ದೃಶ್ಯಗಳನ್ನು ಹೊತ್ತು ಬರುತ್ತಿದ್ದವು. ಒಡಲು ಹಸಿವಿನ ಕುಂಡವಾಗಿ ಹೋಗಿತ್ತು. ಆಗಲೇ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕ ‘ಮನವ ಕಾಡುತಿದೆ’ ಎನ್ನುವ ಅಂಕಣವನ್ನು ರೂಪಿಸಿತ್ತು. ಹತ್ತಾರು ಬರಹಗಾರರನ್ನು ಮಾತನಾಡಿಸಿ ಅವರ ಮನವನ್ನು ಕಾಡುತ್ತಿರುವುದೇನು ಎಂದು ಕೇಳಿತ್ತು. ದೇವನೂರು ಹೇಳಿದ್ದರು, ನಾಲ್ಕೇ ನಾಲ್ಕು ಸಾಲುಗಳಲ್ಲಿ- “ದಿನ ಸವಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತಾರೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ..”. ದೇವನೂರು ಮಹಾದೇವ ನನ್ನ ಮನವನ್ನು ಈ ಕಾರಣಕ್ಕಾಗಿಯೇ ಕಾಡಿದ್ದರು.

ಚೆನ್ನಾಗಿ ನೆನಪಿದೆ. ನಾನು ದೇವನೂರನ್ನು ಭೇಟಿಯಾದದ್ದು ನರಗುಂದದಲ್ಲಿ. ನನ್ನಣ್ಣನ ಪುಸ್ತಕದ ಕಪಾಟಿನಲ್ಲಿ.

ಆಗಿನ್ನೂ ರೈತರ ಮೇಲೆ ಗೋಲಿಬಾರ್ ಆಗಿರಲಿಲ್ಲ. ಆದರೆ ನರಗುಂದ, ನವಲಗುಂದದಲ್ಲಿ ಹೆಜ್ಜೆ ಹಾಕಿದರೆ ಸಾಕು ಅದರ ಒಡಲೊಳಗೆ ಹೊರಳುತ್ತಿದ್ದ ಒಂದು ತಳಮಳವನ್ನು ಖಂಡಿತಾ ಗುರುತಿಸಬಹುದಿತ್ತು. ನನ್ನ ಅಣ್ಣ ಅಲ್ಲಿ ಕೃಷಿ ಅಧಿಕಾರಿ. ನನ್ನ ಅಣ್ಣನ ಪುಸ್ತಕದ ಕಪಾಟಿಗೆ ಕೈಹಾಕಿದಾಗ ಆ ಪುಸ್ತಕ ನನ್ನನ್ನು ಗಕ್ಕನೆ ಹಿಡಿದು ನಿಲ್ಲಿಸಿತ್ತು. ಪುಸ್ತಕದ ತುಂಬಾ ಹರಡಿಕೊಂಡಿದ್ದ ಮುಖ. ಅದು ಶಾಂತವಾಗಿತ್ತು ಎಂದು ಹೇಳಲಿ ಹೇಗೆ? ಆ ಮುಖ ಆ ಕ್ಷಣಕ್ಕೆ ನನಗೆ ಪಕ್ಕಾ ನರಗುಂದದ ಒಡಲೊಳಗಿನ ತಳಮಳದ ಮುಖದಂತೆ ಕಂಡಿತ್ತು. ಆ ಮುಖದ ಮೇಲೆ ಕೈಯಲ್ಲಿ ಬರೆದಂತೆ ‘ದ್ಯಾವನೂರು’ ಎನ್ನುವ ಹೆಸರು.

ನೆಲಮನೆ ಪ್ರಕಾಶನ ನನಗೆ ದೇವನೂರು ಮಹಾದೇವರನ್ನು ಪರಿಚಯಿಸಿದ್ದು ಹೀಗೆ. ಆ ಪುಸ್ತಕದ ರೀತಿಯೇ ತಾನು ಅಧೋಲೋಕದ ಅಕಾವ್ಯವನ್ನು ಹೊತ್ತು ನಿಂತಿದ್ದೇನೆ ಎಂದು ಸಾರಿಬಿಟ್ಟಿತ್ತು. ದೇವನೂರು ತಮ್ಮ ಅಮಾಸನನ್ನೂ, ಸಾಕವ್ವನನ್ನೂ, ದುಪ್ಟಿ ಕಮಿಷನರ್ ನನ್ನೂ, ಜೋತಮ್ಮಗಳನ್ನೂ ಕೈಹಿಡಿದುಕೊಂಡು ಸೀದಾ ನನ್ನೊಳಗೆ ನಡೆದುಕೊಂಡು ಬಂದುಬಿಟ್ಟಿದ್ದರು. ಅವರು ಹೀಗೆ ನಡೆದುಕೊಂಡು ಸುಖಾಸುಮ್ಮನೆ ಬರಲಿಲ್ಲ. ನನ್ನೊಳಗೆ ತಲ್ಲಣದ ಮಳೆಗೆರೆದರು. ನಾನು ನೋಡಿಯೂ ಗೊತ್ತಿಲ್ಲದ, ಅದುವರೆಗೆ ಕೇಳಿಯು ಗೊತ್ತಿರದ, ಅನುಭವಿಸಿಯೇ ಇರದ ಒಂದು ಲೋಕವನ್ನು ನನಗೆ ದಾಟಿಸಿದ್ದರು.

ಹೀಗೆ ಹೇಳುವಾಗಲೂ ಮತ್ತೆ ದೇವನೂರರ ಮಾತಿಗೆ ಮರಳುತ್ತಿದ್ದೇನೆ. “ನಾವು ಮಾಡಬೇಕಾದದ್ದು ಕ್ರಾಂತಿ. ಕ್ರಾಂತಿ ಸಾಹಿತ್ಯದಿಂದ ಅಗದು. ಕೈಲಾಗದವ ಬರೆದುಕೊಳ್ಳುತ್ತಾನೆ… ಇತ್ಯಾದಿ ಚರ್ಚೆ ಕೇಳಿದ್ದೇನೆ”, ಎನ್ನುತ್ತಾ ಸಾಹಿತ್ಯ ಉಂಟುಮಾಡುವ ಪರಿಣಾಮವನ್ನು ವಿವರಿಸುತ್ತಾ ಹೋಗುತ್ತಾರೆ. “ನಮ್ಮ ಪಂಚಮ ಪತ್ರಿಕೆಯ ಕೆಲವು ಅನುಭವಗಳನ್ನು ಓದಿ ಸಂವೇದನಾಶೀಲ ಬ್ರಾಹ್ಮಣರೊಬ್ಬರು ಒಂದು ಕಾಗದ ಬರೆದಿದ್ದರು. ಅದರಲ್ಲಿ ಅವರು ‘ಇದುವರೆಗೂ ವಿಚಾರದ ಮಟ್ಟದಲ್ಲಿ ದಲಿತರ ಪರ ಇದ್ದೆ. ಈಗ ‘ಪಂಚಮ’ದಲ್ಲಿ ಪ್ರಕಟವಾಗುತ್ತಿರುವ ಅನುಭವ ಓದುತ್ತಾ ಅವು ನನ್ನವೂ ಆದವು. ನಾನು ದಲಿತನಾಗಿ ತಳಮಳಿಸುತ್ತಾ ಚಿಂತೆಗೀಡಾದೆ’ ಎಂಬರ್ಥದಲ್ಲಿ ಬರೆದಿರುವರು. ಅಂದರೆ ವಿಚಾರದಿಂದ ದಲಿತರ ಪರ ಆಗುವವನು, ಸಾಹಿತ್ಯ ಉಂಟುಮಾಡುವ ಅನುಭವದಿಂದ ದಲಿತ ಸ್ಥಿತಿಯನ್ನು ಅನುಭವಿಸುತ್ತಾನೆ. ಗಾಯ ಎಂಬುವುದು ವಿಚಾರವಾದರೆ, ಗಾಯದ ಅನುಭವವನ್ನು ಭಾಷೆಯಲ್ಲಿ ಮೂಡಿಸುವುದು ಸಾಹಿತ್ಯವಾಗುತ್ತದೆ. ಈ ಅನುಭವಿಸುವಿಕೆಯು ಸಮೀಪಗೊಳಿಸುತ್ತದೆ. ಹಾಗೂ ಕಲಾವಿದ ಸ್ವಭಾವದಲ್ಲೇ ‘ನಿನ್ನೊಳಕ್ಕೆ ನಾನು ಹೋಗಿ ನಿನ್ನನ್ನು ಅನುಭವಿಸುವ’ ಗುಣವಿರುತ್ತದೆ. ಇದು ಸಮಾಜ ಬದಲಾವಣೆ ಬಯಸುವ ನಮಗೆ ಅತ್ಯಗತ್ಯ”. ಹಾಹಾಗೆಯೇ ದೇವನೂರು ಅವರು ನನ್ನೊಳಗೆ ತಮ್ಮ ಕಥಾ ಲೋಕದ ಎಲ್ಲಾ ಪಾತ್ರಗಳನ್ನು ನುಗ್ಗಿಸಿ ಗಾಯದ ಅನುಭವವನ್ನು ಮೂಡಿಸುತ್ತಾ ಹೋದರು.

ದ್ಯಾವನೂರರ ಲೋಕದ ‘ದುಪ್ಟಿ ಕಮಿಷನರ್’ ನನ್ನೇ ಬಹುತೇಕ ಹೋಲುತ್ತಿದ್ದ ನಮ್ಮನ್ನು ಅಲುಗಾಡಿಸಿ ಹಾಕಿದ್ದು ‘ಒಡಲಾಳ’. ಅದು ನಮ್ಮ ಒಡಲಾಳದ ಕಥೆಯು ಹೌದು. ಅವರು ದ್ಯಾವನೂರಲ್ಲಿ, ನಾವು ಬೆಂಗ್ಳೂರಲ್ಲಿ ನೋವನ್ನು ಹೆಕ್ಕುತ್ತಾ ಇದ್ದೆವೇನೋ. ಅವರ ಕೃತಿ ಎಷ್ಟು ನಮ್ಮನ್ನು ಹಿಂಡಿತ್ತೋ ಅಷ್ಟೇ ಸಮರ್ಥವಾಗಿ ಹಿಂಡಿದ್ದು ಸಿಜಿಕೆ ನಾಟಕ. ಕಡಲೆಕಾಯಿ ಕಳ್ಳತನ ಬಗೆದು ನೋಡಲು ಬರುವ ಪೊಲೀಸರು ಮಡಿಕೆ ಚೂರು ಚೂರು ಮಾಡುವುದನ್ನೂ, ಸಿಜಿಕೆ ಆ ಮಡಿಕೆಯೊಳಗೆ ಮೊಟ್ಟೆಗಳಿರಿಸಿ ಅದರ ಲೋಳೆ ನಾಟಕದ ದೃಶ್ಯ ಮುಗಿದರೂ ಸೋರುತ್ತಾ ಒಂದು ವಿಷಾದ ಹಂಚುವುದನ್ನೂ ಅನುಭವಿಸಿದ್ದೇವೆ. ಸಾಕವ್ವನ ಭಾರವಾದ ಹೆಜ್ಜೆಯೊಳಗೆ ನಮ್ಮ ಹೆಜ್ಜೆಗಳೂ ಸೇರಿಹೋಗಿದೆ.

ದೇವನೂರರ ಸಾಹಿತ್ಯದ್ದು ಒಂದು ಸೂಕವಾದರೆ ಅವರ ಚಿಂತನೆಗಳದ್ದೇ ಇನ್ನೊಂದು ತೂಕ. ನಾನು ಸದಾ ಮುಖಾಮುಖಿಯಾಗುತ್ತಾ ಹೋದದ್ದು ಅವರ ಚಿಂತನೆಗಳ ಜೊತೆಗೇ. ಅಯೋಧ್ಯೆಯ ಕಾರಣಕ್ಕಾಗಿ ರಥ ಯಾತ್ರೆ ಆರಂಭಿಸಿ ಇಡೀ ದೇಶಕ್ಕೆ ಕೊಳ್ಳಿ ಇಡುತ್ತಿದ್ದ ದಿನಗಳು ಅವು. ಎಲ್ಲೋ ದೂರದಲ್ಲಿ ಮಾತ್ರ ಕೋಮು ಗಲಭೆಯಾಗುತ್ತವೆ ಎಂದು ನಂಬಿದ್ದ ಕಾಲದಲ್ಲಿ ನಮ್ಮ ಮನೆ ಬಾಗಿಲಿಗೇ ಬಂದ ಗಲಭೆಗಳು ನಮ್ಮನ್ನು ತಲ್ಲಣಿಸಿ ಹಾಕಿತ್ತು. ಕಣ್ಣೆದುರಿಗೇ ಒಂದು ಕೋಮು ರಾಜಕೀಯ ತಳ ಊರುತ್ತಾ, ಸ್ಥಿರವಾಗುತ್ತಾ, ಪ್ರಬಲವಾಗುತ್ತಾ, ದೇಶದ ಮುನಸ್ಥಿತಿ ಬದಲಾಯಿಸುತ್ತಾ ಹೋಗುತ್ತಿದ್ದುದನ್ನು ಕಂಡು ಅದನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ತಲ್ಲಣಿಸಿದ್ದೆವು ದೇವನೂರು ಅವರು ನಮಗೆ ಆಸರೆಯಾಗಿ ಒದಗಿದ್ದು ಆಗಲೇ.

ದಾಸ್ತೋವಸ್ಕಿಯ ‘ಕ್ರೈಮ್ ಅಂಡ್ ಪನಿಶ್ ಮೆಂಟ್ ‘ ಕೃತಿಯ ಮೂಲಕ ಸ್ಪಷ್ಟವಾಗಿ ಈ ರಾಜಕಾರಣದ ಹಿಂದಿನ ರಾಜಕಾರಣವನ್ನು ಬಿಡಿಸಿಡುತ್ತಾ ಹೋದರು. ಆ ಕಾದಂಬರಿಯ ನಾಯಕ ರೋಡಿಯಾನ್ ಎರಡು ಕೊಲೆ ಮಾಡುತ್ತಾನೆ. ಒಂದು ಕೊಲೆ ಸಂಚು ಹೂಡಿ ಮಾಡಿದ ಕೊಲೆ, ಇನ್ನೊಂದು ಆ ಕೊಲೆ ಮಾಡುವಾಗ ನೋಡಿದ ಸಾಕ್ಷಿಯದ್ದು. ಒಂದು ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯಾದರೆ, ಇನ್ನೊಂದು ಅಪ್ರಜ್ಞಾಪೂರ್ವಕವಾಗಿ ಮಾಡಿದ್ದು. ಆದರೆ ಪ್ರಜ್ಞಾಪೂರ್ವಕವಾಗಿ ಮಾಡಿದ ಕೊಲೆಯ ಬಗ್ಗೆ ವಿಹ್ವಲಗೊಳ್ಳುವ ಆತ ಇನ್ನೊಂದು ಕೊಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. “ಈ ಕಾದಂಬರಿಯ ಎಲ್ಲಾ ವಿವರಗಳನ್ನು ಮರೆತರೂ ಈ ವಿಲಕ್ಷಣ ನನ್ನ ಮನದಲ್ಲಿ ಉಳಿಯಿತು. ಕೊಲೆ, ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ಯೋಜನೆ ಮಾಡಿ ಮಾಡುವುದಕ್ಕೂ, ಉದ್ಧೇಶರಹಿತವಾಗಿ ಕೊಲೆ ಹಿಂಸೆ ಆಗುವುದಕ್ಕೂ ಇರುವ ಅಗಾಧ ವ್ಯತ್ಯಾಸವನ್ನು ಅದು ನನಗೆ ಮನಗಾಣಿಸಿತ್ತು. ಉದ್ಧೇಶರಹಿತ ನೂರು ಕೊಲೆಗಳ ಮುಂದೆ, ಕೊಲೆ-ಹಿಂಸೆಯನ್ನು ತಾತ್ವಿಕಗೊಳಿಸಿದ ಒಂದೇ ಕೊಲೆ ಸಮ ಸಮ ಅನಿಸಿಬಿಟ್ಟಿತು”.

ಸಮಾಜದೊಳಗಿನ ಒಂದು ಹೊಸ ಚಲನೆಯನ್ನು ಇಡೀ ದೇಶ ತನ್ನದಾಗಿಸಿಕೊಳ್ಳಲು ನಿರೀಕ್ಷಿಸುತ್ತಿದ್ದಾಗಲೇ ಬಿಎಸ್ಪಿ ಬಿಜೆಪಿಯ ಜೊತೆ ಒಪ್ಪಂದ ಮಾಡಿಕೊಂಡು ಅಧಿಕಾರದ ಗದ್ದುಗೆಗೇರಿಬಿಟ್ಟಿತ್ತು. ಇದು ನಮ್ಮೊಳಗಿನ ಒಂದು ಆಶಾವಾದಕ್ಕೆ ಬಿದ್ದ ಪೆಟ್ಟು. ಸಮಾಜದ ಸ್ವಾಸ್ಥ್ಯಕ್ಕೆ ಒಂದು ಮದ್ದಿದೆ ಎಂದು ನಾವು ನೋಡುತ್ತಿರುವಾಗಲೇ ಅದು ವಿಷವೂ ಆಗಿಬಿಡಬಹುದು ಎನ್ನುವ ಆತಂಕಕ್ಕೆ ತಳ್ಳಿತ್ತು. ಇದನ್ನು ಅರ್ಥಮಾಡಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದಾಗ ಅದೇ ದೇವನೂರು ನೆರವಿಗೆ ಬಂದರು. ಈ ಹಿಂದೆ ಅಯೋಧ್ಯ ಸಂದರ್ಭದಲ್ಲಿ ಹೇಳಿದ್ದನ್ನು ಇನ್ನಷ್ಟು ವಿಸ್ತರಿಸಿದರು. ಇನ್ನಷ್ಟು ಸ್ಪಷ್ಟಗೊಳಿಸಿದರು. “ಬ್ರಾಹ್ಮಣ ರಾಜಕೀಯ ಮಾಡುವ ವ್ಯಕ್ತಿಗಿಂತ ಬ್ರಾಹ್ಮಣ್ಯ ರಾಜಕೀಯವನ್ನು ತಾತ್ವಿಕಗೊಳಿಸಿದ ರಾಜಕಾರಣ ದುಷ್ಟ ಎಂಬುದರ ಅರಿವು ನಮಗಿರಬೇಕು. ಉದಾ: ಒಬ್ಬ ವ್ಯಕ್ತಿ ಸಾಂದರ್ಭಿಕವಾಗಿ ಒಂದು ಕೊಲೆ ಮಾಡಿದರೆ ಆತ ತಲೆತಗ್ಗಿಸಿ ನಡೆಯಬಹುದು, ಪಶ್ಚಾತ್ತಾಪ ಪಡಬಹುದು, ನರಳಬಹುದು. ಇನ್ನೊಂದು ಕೊಲೆ ಮಾಡದಿರಬಹುದು. ಅದೇ ವ್ಯಕ್ತಿ ಬಂದು ತತ್ವಕ್ಕಾಗಿ ಎಂದು ಕೊಲೆ ಮಾಡಿದ್ದರೆ ಆಗ ಆತ ತಲೆ ಎತ್ತಿ ನಡೆಯುತ್ತಾನೆ. ಅವನಲ್ಲಿ ಪಶ್ಚಾತ್ತಾಪ ಇರುವುದಿಲ್ಲ. ಆತ ನರಳುವುದಿಲ್ಲ. ಮುಂದಿನ ಕೊಲೆಗಾಗಿ ಹಸನ್ಮುಖನಾಗಿ ಹಾತೊರೆಯುತ್ತಾನೆ. ಸಾಂದರ್ಭಿಕವಾಗಿ ಅಸಮಾನತೆಯನ್ನು ಆಚರಿಸುವವನಿಗಿಂತ, ಅಸಮಾನತೆಯನ್ನು ತಾತ್ವಿಕಗೊಳಿಸುವವನು ಸಾವಿರಾರು ಪಾಲು ದುಷ್ಟ ಎಂಬ ಎಚ್ಚರ ನಮಗಿರಬೇಕು…”

ಬಿಎಸ್ಪಿ ಪಕ್ಷವು ಹೊಂದಾಣಿಕೆಯ ಪರವಾಗಿ ಸಾಕಷ್ಟು ವಾದಗಳನ್ನು ಮಂಡಿಸುತ್ತಿದ್ದಾಗ ದೇವನೂರು ಒಂದೇ ಪ್ರಶ್ನೆ ಕೇಳುತ್ತಾರೆ- “ಡಾ. ಅಂಬೇಡ್ಕರ್ ತನ್ನ ಕಟು ವ್ಯಕ್ತಿತ್ವಕ್ಕೆ, ಆದರ್ಶಗಳಿಗೆ ತಿಲಾಂಜಲಿ ಬಿಟ್ಟು ಅವಕಾಶವಾದಿ ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಏನಾಗುತ್ತಿತ್ತು? ಅವರು ಸತ್ತ ದಿನವೇ ಸತ್ತು ಹೋಗುತ್ತಿದ್ದರು”. ರಾಜಕೀಯ ಎನ್ನುವುದನ್ನು ಮೂರ್ಖನ ಕೊನೆಯ ಮನೆ ಎಂದು ಹೇಳುತ್ತಾ ರಾಜಕೀಯವನ್ನೇ ಸಿನಿಕತನದಿಂದ ನೋಡುವವರ ಬಗ್ಗೆ ನನಗಂತೂ ಅಸಮಧಾನವಿತ್ತು. ಅದಕ್ಕೆ ಕಾರಣ ನಾನು ಸಂವಹನ ಕೋರ್ಸ್ ಧಿನಗಳಲ್ಲಿ ಓದಿದ್ದ ಸೀನ್ ಮ್ಯಾಕ್ಬ್ರೈಡ್ ನ ‘ಮೆನಿ ವಾಯ್ಸಸ್, ಒನ್ ವರ್ಲ್ಡ್’ ಸಹಾ ಕಾರಣವಾಗಿತ್ತು. ನೊಬೆಲ್ ಪ್ರಶಸ್ತಿ ಪಡೆದ ಮ್ಯಾಕ್ ಬ್ರೈಡ್ ಸುದ್ದಿಯ ಅಮೇರಿಕೀಕರಣದ ವಿರುದ್ಧ ಜಗತ್ತಿನ ಎಲ್ಲೆಡೆ ಸಂಚರಿಸಿ ಮಾಧ್ಯಮ ಹೇಗೆ ಸಮಾಜ ಬದಲಾವಣೆ ತರುತ್ತದೆ ಎನ್ನುವ ನೋಟ ಮಂಡಿಸುತ್ತಲೇ ರಾಜಕಾರಣ ಎನ್ನುವುದು ಹೇಗೆ ಸಮಾಜದ ಬದಲಾವಣೆಯ ಭಾಗ ಎನ್ನುವುದನ್ನು ಹೇಳುತ್ತಾ ಹೋಗಿದ್ದರು. ಹಾಗಾಗಿ ನಾನಂತೂ ರಾಜಕೀಯವನ್ನು ಸಿನಿಕವಾಗಿ ನೋಡಲು ಸಿದ್ಧನಿರಲಿಲ್ಲ. ಮತ್ತೆ ಆ ವೇಳೆಗೆ ನೆರವಿಗೆ ಬಂದದ್ದು ದೇವನೂರು. “ರಾಜಕೀಯ ಮಾಡುವ ಛಾತಿ ನನಗೆ ಇಲ್ಲದಿರಬಹುದು. ಆದರೆ ರಾಜಕೀಯದ ಮಹತ್ವವನ್ನು ನಾನು ಕಡೆಗಣಿಸುತ್ತಿಲ್ಲ” ಎನ್ನುತ್ತಾರೆ.

ನಕ್ಸಲೀಯರ ಬಗ್ಗೆ ಒಂದು ರೀತಿಯ ಮೃದು ಮನಸ್ಸನ್ನು ಹೊಂದಿದ್ದ ಹೋರಾಟಗಾರರ ಮಧ್ಯೆ ನನಗೆ ಒಂದು ಅಂತರ ಇದ್ದೇ ಇತ್ತು. ಇದಕ್ಕೆ ನಾನು ಬೆಳೆದ ಚಿಂತನಾ ಕ್ರಮವೂ ಕಾರಣ ಇದ್ದಿರಬಹುದು ಪೊಲೀಸರಿಗೆ ಗುಂಡಿಕ್ಕಿದ ಅಜಿತಾಳ ಬಗ್ಗೆಯಂತೂ ಎಲ್ಲರೂ ಮೆಚ್ಚಿ ಮಾತನಾಡುವಾಗ ನಾನು ಅದರಿಂದ ದೂರವೇ ಉಳಿದಿದ್ದೆ. ಕಾರಣ ಸಂವಿಧಾನದ ಚೌಕಟ್ಟಿನೊಳಗೇ ಬದಲಾವಣೆ ತಂದುಕೊಳ್ಳುವ ದಾರಿಗಳು ಇರುವುದನ್ನು ನನ್ನ ಕಲಿಕಾ ಕೇಂದ್ರಗಳ ತೋರಿಸಿಕೊಟ್ಟಿದ್ದವು. ದೇವನೂರು ಅವರು ಇದಕ್ಕೂ ಉತ್ತರ ಒದಗಿಸಿದರು. “ಅಜಿತಾ ಮತ್ತು ಅಕೆಯ ಗುಂಪು ಮಾಡಿದ್ದು ಸರಿಯೂ ತಪ್ಪೋ ಎಂಬ ಗೊಂದಲದಲ್ಲಿದ್ದೆ. ನನ್ನ ಪೋಲೀಸ್ ಕಾನ್ಸ್ಟೇಬಲ್ ಆಗಿದ್ದುದೂ ನನ್ನ ಅಪ್ಪ ಅಜಿತಾಳಿಂದ ಕೊಲೆಯಾಗಿದ್ದರೆ ಅಜಿತಾ ನನಗೆ ಹೇಗೆ ಕಾಣಿಸುತ್ತಿದ್ದಳು ಎಂಬ ಉಹೆಯೂ ಇದೆಲ್ಲದರೊಡನೆ ನನ್ನ ಮನಸ್ಸಿಗೆ ಬರುತ್ತಿತ್ತು”.

ಇಂತಹದ್ದೇ ಪ್ರಶ್ನೆಗಳು ನನಗೆ ಎದ್ದದ್ದು ನವರಾತ್ರಿಯ ಸಂದರ್ಭದಲ್ಲಿ. ದಸರಾ ಸಂದರ್ಭದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರಧಾನ ಭಾಷಣ ಮಾಡಿದ ಹಂಪ ನಾಗರಾಜಯ್ಯ ಅವರು ‘ದಸರೆ ಎನ್ನುವುದು ಆರ್ಯರು ದ್ರಾವಿಡರನ್ನು ಸಂಹಾರ ಮಾಡಿದ ಕಥೆ. ಅಂತಹದರಲ್ಲಿ ದ್ರಾವಿಡರಾದ ನಾವು ದಸರೆಯನ್ನು ವಿರೋಧಿಸಬೇಕೇ ಹೊರತು ಆಚರಿಸುವುದು ತಪ್ಪು’ ಎಂದಿದ್ದರು. ಹೊಸ ಪಾಠವೊಂದು ನಮಗೆ ಸಿಕ್ಕಿತ್ತು. ನಾನು ಅಲ್ಲಿಂದ ಗುಲ್ಬರ್ಗಾಗೆ ಹೋದೆ. ಅಲ್ಲಿ ಕೋಣಗಳ ಬಲಿ. ನೂರಾರು ಕೋಣಗಳನ್ನು ಹಾಡಗಹಲೇ ಕೊಂದು ಹಾಕುವ ಆಚರಣೆಗಳು ನನ್ನೊಳಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಗಲೇ ದೇವನೂರು ಮಾತನಾಡಿದ್ದು. “ದಲಿತರಾದ ನಮ್ಮಲ್ಲಿ ಮಾರಮ್ಮನಿಗೆ ಕೋಣ ಬಲಿ ಕೊಡುವ ಪದ್ದತಿ ಇತ್ತು, ಈ ಪದ್ದತಿಯ ಹಿಂದೆ ಇರುವ ಕಥೆ ಏನೆಂದರೆ ಒಬ್ಬ ಅಸ್ಪೃಶ್ಯನು ಬ್ರಾಹ್ಮಣ ಕನ್ಯೆಯನ್ನು ಪ್ರೀತಿಸುತ್ತಾನೆ. ಬ್ರಾಹ್ಮಣ ಎಂದು ಸುಳ್ಳು ಹೇಳಿ ವಂಚಿಸಿ ಆಕೆಯನ್ನು ಮದುವೆಯಾಗುತ್ತಾನೆ. ಮುಂದೆ ತಾನು ಮದುವೆಯಾದಾತ ಅಸ್ಪ್ರಶ್ಯ ಎಂದು ಆ ಬ್ರಾಹ್ಮಣಿಗೆ ತಿಳಿದಾಗ ಆಕೆ ಕುಪಿತಳಾಗಿ ಅಗ್ನಿ ಪ್ರವೇಶ ಮಾಡುತ್ತಾ ‘ಜಾತಿ ಸುಳ್ಳು ಹೇಳಿ ನನ್ನನ್ನು ಕೆಡಿಸಿದ ಪ್ರಯುಕ್ತ ಆ ಅಸ್ಪ್ರಶ್ಯ ಕೋಣವಾಗಿ ಹುಟ್ಟಲಿ. ಆ ಕೋಣವನ್ನು ನನಗೆ ಬಲಿ ಕೂಡಲಿ’ ಎಂದು ಶಾಪ ಕೊಡುತ್ತಾಳೆ. ಇದು ಕಥೆ. ಕೋಣವಾದ ತಮ್ಮವನನ್ನೇ ನಮ್ಮವರು ಬಲಿ ಕೊಡುತ್ತಾ, ಅಷ್ಟೇ ಅಲ್ಲ ತಿಂದು ಬಂದಿದ್ದಾರೆ. ಇಂದು ಕೋಣ ಬಲಿಯು ಮಾಂಸ ಮಾತ್ರವಾಗಿರಬಹುದು. ಆದರೆ ಹಿಂದೆ, ನಮ್ಮವರನ್ನು ನಮ್ಮಿಂದಲೇ ಕೊಲ್ಲಿಸುವುದನ್ನು ಈ ಕತೆ ಮಾಡಿಸಿತ್ತು. ವರ್ಣಸಂಕರವನ್ನು ತಡೆದಿತ್ತು”.

ಧರ್ಮಸ್ಥಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೇ ಕಾರಣವಾಗಿ ಬಂಡಾಯ ಸಾಹಿತ್ಯ ಸಂಘಟನೆ ಮೂಡಿ ಬಂದಾಗ ‘ಹೀಗೇಕೆ?’ ಎಂದು ಅನಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತನ್ನು ಅರ್ಥಮಾಡಿಕೊಳ್ಳುವ ಬಗೆ ಹೇಗೆ ಎಂದು ಪ್ರಯತ್ನಿಸುತ್ತಿರುವಾಗ ದೇವನೂರರು “ಸಾಹಿತ್ಯ ಪರಿಷತ್ತು, ಅದಕ್ಕಿರುವ ರಚನೆಯಲ್ಲಿ ಎಂದೂ ನಮ್ಮಂಥವರ ಆಸೆಗಳನ್ನು ಮುಟ್ಟಲಾರದು. ನಮ್ಮ ಆಸೆಗಳ ಪೂರೈಕೆಗಾಗಿ ಅದರ ಕಡೆ ನೋಡುವುದೇ ತಪ್ಪು, ಮೂರ್ಖತನ ಇತ್ಯಾದಿ. ಪರಿಷತ್ ನಿಲುಗಡೆಯಾದ ಸಾಹಿತ್ಯವನ್ನು ಮೆರೆಸುತ್ತ ಬಂದಿದೆ. ಅದರಿಂದ ಆಗುವುದು ಅದೇನೆ. ನಮಗೆ ಬೇಕಾಗಿರುವುದು ನಡಿಗೆ” ಎಂದಿದ್ದರು.

ನನ್ನನ್ನು ಮ್ಯಾಕ್ಬೆತ್ ಓದು ಆವರಿಸಿಕೊಂಡಿದ್ದ ದಿನಗಳು. ರಾಮಚಂದ್ರ ದೇವರ ಅನುವಾದ ಅದು. ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೆಲ್ಲವೂ ನನ್ನ ಕೈಯಿನ ಕಲೆಗಳನ್ನು ಹೋಗಲಾಡಿಸಲಾರದೇ ..? ಎಂದು ಲೇಡಿ ಮ್ಯಾಕ್ಬೆತ್ ನಿಡುಸುಯ್ಯುತ್ತಾಳೆ. ಆ ರಕ್ತದ ಕಲೆ, ತೊಳೆದರೂ ಹೋಗದ ರಕ್ತದ ಕಲೆಗಳು ನನ್ನ ಮನಸ್ಸನ್ನು ತಟ್ಟಿ ನಿಂತುಬಿಟ್ಟಿತ್ತು. ಆಗಲೇ ದೇವನೂರು ತಮ್ಮ ‘ಕುಸುಮಬಾಲೆ’ ಹುಟ್ಟಿದ್ದರ ಪ್ರೇರೇಪಣೆ ಏನು ಅಂತ ಹುಡುಕುತ್ತಾ ಇದ್ದರು. ಅಂದಾಜಾಗಿ ಅವರ ಮುಂದೆ ಮೂರು ಪ್ರೇರೇಪಣೆಗಳಿದ್ದವು. ಅದರಲ್ಲಿ ಒಂದು ಅವರ ದಲಿತ ಸ್ನೇಹಿತನೊಬ್ಬನ ಕೊಲೆ. “ದಲಿತ ಸಂಘಟನೆಯಲ್ಲಿದ್ದ ದಲಿತನ ಕೊಲೆ. ಆತ ಕೊಲೆಯಾದ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದಲ್ಲಿದ್ದ ಗೋಡೆಗಳಿಗೆ ಸುಣ್ಣ ಬಳಿಯಲಾಗಿತ್ತು. ಅಲ್ಲಿದ್ದ ಒಬ್ಬ ಮುದುಕಿ ನೀವು ಎರಡು ದಿನ ಮುಂಚೆ ಬಂದಿದ್ದರೆ ರಕ್ತದ ಕಲೆಗಳನ್ನು ನೋಡಬಹುದಿತ್ತು ಎಂದಳು. ಆ ಕ್ಷಣ ನನಗೆ ‘ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ರಕ್ತದ ಕಲೆಗಳು ಉಳಿಯುವುದಿಲ್ಲವೇ?’ ಅನ್ನಿಸಿ ಅದು ಒಳಗೇ ಬೆಳೆಯತೊಡಗಿತು” ಎನ್ನುತ್ತಾರೆ.

ನನ್ನೊಳಗೆ, ನನ್ನ ದಾರಿಯುದ್ದಕ್ಕೂ ಎದ್ದ ಎಷ್ಟೊಂದು ಪ್ರಶ್ನೆಗಳಿವೆ. ಆ ರಕ್ತದ ಕಲೆ, ಆ ಅಜಿತಾ, ಆ ಕಾನ್ಶಿರಾಂ, ಆ ಹೊಂದಾಣಿಕೆ, ಆ ಷೇಕ್ಸ್ಪಿಯರ್, ಆ ಕೋಣ ಬಲಿ, ಆ ಸಾಹಿತ್ಯ ಪರಿಷತ್ತು, ಆ ಇಥಿಯೋಪಿಯಾ, ಆ ಜಾರ್ಜ್ ಫ಼ರ್ನಾಂಡಿಸ್, ಆ ರಾಜಕೀಯ, ಆ ಅಯೋಧ್ಯೆ, ಆ ರಾಮ, ಆ ಶರಣರು, ಆ ಅನುಭವ ಮಂಟಪ, ಹಾಗೆ ಆ ಎಲ್ಲಕ್ಕೂ ದೇವನೂರು ಉತ್ತರವಾಗಿದ್ದಾರೆ. ನನ್ನಲ್ಲಿ ಇನ್ನೂ ಪ್ರಶ್ನೆಗಳಿವೆ ಆ ಅಮೇರಿಕಾ, ಆ ನೀರಿನ ವ್ಯವಹಾರ, ಆ ತೈಲದ ವಹಿವಾಟು, ಆ ಒಳಮೀಸಲಾತಿ, ಆ ರೈತ ಸಂಘ, ಆ ಕಡಿದಾಳುಶಾಮಣ್ಣ, ಆ ದಶಕ, ಆ ದೇವರಾಜ ಅರಸು, ಆ ಪಂಪ, ಆ ಲಂಕೇಶ್, ಆ ಇಂಗ್ಲೀಷ್, ಆ ರೈತ ಆತ್ಮಹತ್ಯೆ, ಆ ಇರಾಕ್ ಯುದ್ಧ, ಆ ಮಠಗಳು, ಆ ಅಹಿಂದ, ಆ.. ಹೀಗೆ ಏನೇನೋ..

ದೇವನೂರು ಅವರು ‘ಕುಸುಮಬಾಲೆ’ ಕೃತಿಯಲ್ಲಿ ರೂಪಿಸಿದ ಜೋತಮ್ಮಗಳ ಕಥೆಗೆ ಬರುತ್ತೇನೆ. “ರಾತ್ರಿ ದೀಪಗಳನ್ನು ಆರಿಸಿದ ನಂತರ ಈ ದೀಪಗಳ ಆತ್ಮಗಳು ಹಳ್ಳಿಯ ಒಂದು ಸ್ಥಳದಲ್ಲಿ, ಮರವೊಂದರ ಕೆಳಗಿರುವ ಮಂಟಪದಲ್ಲಿ ಸೇರಿ ತಂತಮ್ಮ ಮನೆಗಳಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಹಂಚಿಕೊಳ್ಳುತ್ತವೆ ಎನ್ನುವುದು ಈ ಕಥೆ. ಜನಪದ ಕಥೆಯಲ್ಲಿ ಇದನ್ನು ತಮಾಷೆಗೆಂದು ಬಳಸಲಾಗಿದೆ. ಆದರೆ ನಿಜವನ್ನು ನುಡಿಸುವ ಆತ್ಮವಾಗಿ ನನಗೆ ಇದು ಕಾಣಿಸಿತು” ಎನ್ನುತ್ತಾರೆ ದೇವನೂರು.

ಮೆಟ್ಟಿಲು ಹತ್ತಿದ ಸೂತ್ರಧಾರ ರಾಮಯ್ಯ

-ಸೂತ್ರಧಾರ ರಾಮಯ್ಯ
ನನ್ನುಡಿ

ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟಿದಂತೆ ’ಹನ್ನೊಂದನ್ನು’ ಬಳಸುವ ಬದಲು ನೆರವಾಗಿ ’ಪನ್ ಒಂದನ್ನು’ (ಶ್ಲೇಷೆ) ಬಳಸುವ ಮಾರ್ಗ ಕನ್ನಡದ ಕವಿ, ಲೇಖಕ, ಕನ್ನಡಾಂಗ್ಲ ಪನ್ ಡಿತರಿಗೆ ಹೊಸದೇನು ಅಲ್ಲ. ರನ್ನ, ಕುಮಾರವ್ಯಾಸ, ಕೈಲಾಸಂ, ಬೇಂದ್ರೆ, ನಾ.ಕಸ್ತೂರಿ, ವೈಯನ್ಕೆ, ಲಂಕೇಶ್, ಚಂಪಾ ಇದೀಗ ವಿಶ್ವೇಶ್ವರ ಭಟ್, ದುಂಡಿರಾಜ್, ನಾರಾಯಣ ರಾಯಚೂರು ಹೀಗೆ ಪುಂಖಾನುಪುಂSವಾಗಿ ಹೆಸರುಗಳು ಕೇಳಿಬರುತ್ತವೆ. ಇವರಲ್ಲಿ ಕೆಲವರು ಚದುರಿದಂತೆ ಪನ್ ಬಳಕೆ ಮಾಡಿದರೆ, ಕೆಲವರಂತೂ ವ್ಯಾಪಕವಾದ ವಿಶ್ಲೇಷಣೆಯ ಪನ್‌ಥಕ್ಕೆ ಸೇರಿದವರಾಗಿದ್ದಾರೆ.

ಹಲವು ಅರ್ಥಗಳುಳ್ಳ ಒಂದೇ ಪದವನ್ನು ಹಿಡಿದೋ, ಪದದ ಉಚ್ಚಾರಣೆ ಒಂದೆ ಆದರೂ, ಸಂದರ್ಭಕ್ಕೆ ತಕ್ಕಂತೆ ನಾನಾ ಅರ್ಥಗಳನ್ನು ಆರೋಪಿಸಿವ, ವಿವಿಧಾರ್ಥಗಳಿಂದ ಹೊಳೆಯಿಸುವ, ವಿಪರೀತ ಅರ್ಥಗಳನ್ನು ಪದಕ್ಕೆ ತಳುಕು ಹಾಕಿ, ಸಾಮಾನ್ಯ ಅರ್ಥವನ್ನು ತಳಕ್ಕೆ ಹಾಕಿ ಆಯಾ ಸಂದರ್ಭವನ್ನು ವಿಡಂಬಿಸುತ್ತಾ ಬೇರೊಂದು ಅರ್ಥವನ್ನು ತಳ ತಳಿಸುವಂತೆ ಮಾಡುವುದೆ- ಮಾಡಬೇಕಾದುದೇ ಶ್ಲೇಷೆಯ ಗುಣ-ಧರ್ಮ.

ಯಾವುದೇ ಪದವನ್ನು ಹಿಡಿದು ಪನ್ ಮಾಡಲು ಪ್ರಯತ್ನಿಸುವುದು ಪ್ರಾರಂಭಕ್ಕೆ ಹ್ಯಾ-ಬಿಟ್ ಆದರೂ, ಕ್ರಮೇಣ ಅರೆಕ್ಷಣ ಬಿಟ್ ಇರಲಾರದ ’ಸರ್ಚ್-ರೀಸರ್ಚ್’ ಕಸುಬೇ ಆಗಿ, ಪನ್‌ಸ್ಟರ್ ತನಗೆ ತಾನೇ ಪನ್‌ಜ(ಜ್ವ)ರದ ಪಕ್ಷಿಯಾಗಿ ಹೋಗುವುದು ಸಾಮಾನ್ಯ. ಅವನ ತಲೆಯಲ್ಲಿ ’ಇಟ್ ಕೀಪ್ಸ್ ಹ್ಯಾ-ಪನ್ನಿಂಗ್’ ಅಂದರೆ ಅಚ್ಚರಿಯಿಲ್ಲ. ಹಾಗೆಯೇ ಪನ್‌ಸ್ಟರ‍್ಗಳು ಇರುವ ಕಡೆ ’ಪನ್ಯೂಷನ್-ಫ್ರೀ’ ವಾತಾವರಣವೂ ಅಲಭ್ಯವೇ- ಅಹುದಾದರಹುದೆನ್ನಿ.

ಇನ್ನಷ್ಟು

ಎಚ್ಚೆಸ್ವಿ ಅನಾತ್ಮ ಕಥನ: ತಂಬೂರಿಯ ತಂತಿ ಕಿತ್ತು ಹೋದ ಮೇಲೂ…

ಮನುಷ್ಯ ಸಂಬಂಧಗಳೆಲ್ಲವೂ ನಮ್ಮ ನಮ್ಮ ಅಹಂಕಾರಗಳ ಗೊಣಸಿನ ಮೇಲೆ ಕೂತಿವೆಯೆ? ಯಾಕೋ ಈ ಇಳಿಹೊತ್ತಿನಲ್ಲಿ ಒಮ್ಮೆಗೇ ಈ ಪ್ರಶ್ನೆ ಮೂಡಿ ನನ್ನ ಎದೆ ಧಸಕ್ಕೆಂದಿದೆ. ಇಷ್ಟು ದಿನ ಮನಸ್ಸಿನ ಯಾವ ಮುಡುಕಿನಲ್ಲಿ ಈ ಪ್ರಶ್ನೆ ಹುದುಗಿಕೊಂಡಿತ್ತೋ? ಈವತ್ತು ಯಾಕಾದರೂ ನನ್ನ ಮುಚ್ಚಿದ ಕಣ್ಮುಂದಿನ ಹಳದಿಗಪ್ಪು ತೆರೆಯ ಮೇಲೆ ಒಮ್ಮೆಗೇ ಮೂಡಿತೋ ನಾನು ಉತ್ತರಿಸಲಾರೆ.ಈಗಾಗಲೇ ಕಳೆದುಹೋಗಿರುವ ಅನೇಕ ಆಪ್ತರು ನನ್ನ ಕಣ್ಣ ಮುಂದೆ ಪೆರೇಡು ನಡೆಸುತ್ತಾರೆ. ಈ ಎಲ್ಲ ಮುಖಗಳೂ ಯಾಕೆ ಮಂಕಾಗಿವೆ? ಯಾಕೆ ಯಾವ ಮುಖದಲ್ಲೂ ಉತ್ಸಾಹವೇ ಕಾಣದಾಗಿದೆ? ನನ್ನ ಕಣ್ಣಿಗೆ ಅವರು ಕಾಣುತ್ತಿರುವಂತೆ ನಾನು ಅವರ ಕಣ್ಣಿಗೆ ಕಾಣುತ್ತಿಲ್ಲವೋ ಹೇಗೆ? ಮೆಲ್ಲಗೆ ಆಕಾಶದಿಂದ ಕತ್ತಲ ಫರದೆ ಕೆಳಗಿಳಿಯುತ್ತಾ ಇದೆ. ಅವರು ಕತ್ತಲ ಕಾವಳದಲ್ಲಿ ನಿಧಾನಕ್ಕೆ ಮರೆಯಾಗಲಿಕ್ಕೆ ಹತ್ತಿದ್ದಾರೆ.

ವರ್ತಮಾನಕ್ಕೆ ಭೂತದ ಕಾಟವಿದೆ. ಆದರೆ ಭೂತಕ್ಕೆ ವರ್ತಮಾನದ ಹಂಗಿಲ್ಲವೋ ಹೇಗೆ? ಎಡಗೈ ಅತ್ತಿತ್ತ ತಿರುವುತ್ತಾ ನಿಧಾನಕ್ಕೆ ನಡೆಯುತ್ತಾ ಇರುವವಳು ನನ್ನ ಪತ್ನಿ. ಆಕೆಯನ್ನು ಗಮನಿಸಿಯೇ ಇಲ್ಲ ಎಂಬಂತೆ ಆಕೆಯನ್ನು ಹಿಂಬಾಲಿಸುತ್ತಾ ಇರುವವರು ನನ್ನ ಅಜ್ಜಿಯರು. ಅವರಾದರೂ ಪರಸ್ಪರ ಅಪರಿಚಿತರಂತೆ ನಡೆಯುತ್ತಾ ಇದ್ದಾರೆ. ಅವರ ಹಿಂದೆ ಜಲೋದರದ ಭಾರ ಹೊತ್ತು ತೇಕುತ್ತಾ ನಡೆಯುತ್ತಿರುವವರು ನನ್ನ ಅಜ್ಜ. ಮತ್ತೆ ಇವರು? ನನಗೆ ತುಂಬ ಪ್ರಿಯವಾದ ಆಕೃತಿಯಾಗಿತ್ತಲ್ಲ ಅದು? ಯಾರು ಮಾರಾಯರೇ ಆಕೆ? ನನ್ನ ಗೆಳೆಯ ನಾರಾಯಣನ ಪತ್ನಿ ನಾಗಿಣಿಯಲ್ಲವೇ?

ನಾಗಿಣಿ ನನ್ನ ಗೆಳೆಯನ ಕೈಹಿಡಿದ ಹೊಸದರಲ್ಲಿ ಚಾಮರಾಜಪೇಟೆಯ ನಮ್ಮ ಬಾಡಿಗೆ ಗೂಡಿಗೆ ಊಟಕ್ಕೆ ಅತಿಥಿಗಳಾಗಿ ಬಂದಾಗ ನಾನು ಆಕೆಯನ್ನು ಮೊದಲು ನೋಡಿದ್ದು. ತೆಳ್ಳಗೆ ಬಳ್ಳಿಯ ಹಾಗೆ ಇದ್ದರು ಆಕೆ. ಮದುವೆಯ ಹೋಮ ಕುಂಡದ ಕೆಂಪು ಇನ್ನೂ ಆಕೆಯ ಕಣ್ಣುಗಳಲ್ಲಿ ಹೊಳೆಯುತ್ತಾ ಇತ್ತು. ಬಲೇ ಮಾತುಗಾರನಾಗಿದ್ದ ನನ್ನ ಗೆಳೆಯನಿಗೆ ಹೋಲಿಸಿದರೆ ಆಕೆ ಪರಮ ಮೌನಿ. ನಮ್ಮ ಇಡೀ ಮನೆ ನನ್ನ ಗೆಳೆಯನ ನಗೆ, ಕೇಕೆ, ಉತ್ಸಾಹದ ಮಾತುಗಳಿಂದ ತುಂಬಿಹೋಗಿತ್ತು. ಆಕೆ ಬೆರಗು ಮತ್ತು ಮುಗ್ಧತೆಯನ್ನು ಮುಖದಲ್ಲಿ ಬಚ್ಚಿಟ್ಟುಕೊಳ್ಳುತ್ತಾ ಮೆಲ್ಲಗೆ ನನ್ನ ಪತ್ನಿಯ ಜತೆ ಅಡುಗೆ ಮನೆಯ ಮಬ್ಬುಗತ್ತಲೆಗೆ ಸರಿದಿದ್ದಳು. ಈಡು ಜೋಡು ತುಂಬ ಚೆನ್ನಾಗಿದೆ ಎಂದು ರಾತ್ರಿ ನನ್ನ ಹೆಂಡತಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದಳು. ಉತ್ಸಾಹದ ಅಂಕ ಮುಗಿದ ಮೇಲೆ ನಾಗಿಣಿ ತುಂಬ ಒಳ್ಳೆಯ ಹುಡುಗಿ ಎಂಬ ಮಾತು ನನ್ನ ಪತ್ನಿಯ ಬಾಯಿಂದ ಹೊರಬಿತ್ತು. ಆ ಮಾತು ಪೂರ್ತಿ ಕಿವಿಯಲ್ಲಿ ಇಂಗುವ ಮೊದಲೇ ನಾನು ಒತ್ತಿಬರುತ್ತಿದ್ದ ನಿದ್ದೆಯಲ್ಲಿ ಮುಳುಗುತ್ತಾ ಇದ್ದೆ….

ಇನ್ನಷ್ಟು

ಬರ್ತಾ ಇದೆ ಹೊಸ ಪುಸ್ತಕ..

ಕನ್ನಡ, ಇಂಗ್ಲಿಷ್ ಪುಸ್ತಕ ಕೊಳ್ಳಲು ಅವಧಿ- Flipkart ಸಹಯೋಗದ

ಆನ್ ಲೈನ್ ಮಳಿಗೆಗೆ ಭೇಟಿ ಕೊಡಿ – ಇಲ್ಲಿ ಕ್ಲಿಕ್ಕಿಸಿ

ಗೋವಾದಲ್ಲಿ ಒಂದು ಸಾವು..

ಗೋವಾ ಕನ್ನಡ ಸಮಾಜ, ಪಣಜಿ
ಇವರು ಪ್ರಕಟಿಸುವ
ಗೋವಾ ಜನನುಡಿ
ಕನ್ನಡ ಮಾಸಪತ್ರಿಕೆಯ
ದ್ವಿತೀಯ ವಾರ್ಷಿಕೋತ್ಸವ
ಮುಖ್ಯ ಅಭ್ಯಾಗತರು
ಶ್ರೀ ಶಿವಶಂಕರ ವಿ. ಭಾವಿಕಟ್ಟಿ
ಕನ್ನಡ ಸಂಸೃತಿ ಇಲಾಖೆ, ಬೆಂಗಳೂರು
ಅಧ್ಯಕ್ಷತೆ
ಶ್ರೀ ವಿಜಯ ಶೆಟ್ಟಿ
ಅಧ್ಯಕ್ಷರು, ಗೋವಾ ಕನ್ನಡ ಸಮಾಜ, ಪಣಜಿ

ರಂಗಸಂಪದ, ಬೆಳಗಾವಿ
ಇವರು ಪ್ರಸ್ತುತಪಡಿಸುವ ನಾಟಕ
ಒಂದು ಸ್ವರದ ಸಾವು
ನಿರ್ದೇಶನ
ಶ್ರೀ ಶಿರೀಶ ಜೋಶಿ, ಬೆಳಗಾವಿ

ಸ್ಥಳ: ಗೋವಾ ರಾಜ್ಯ ವಸ್ತು ಸಂಗ್ರಹಾಲಯ, ಕದಂಬ ಬಸ್ ನಿಲ್ದಾಣದ ಹಿಂಭಾಗ, ಪಾಟೊ, ಪಣಜಿ
ದಿನಾಂಕ: ೨೭ ಫೆಬ್ರವರಿ ೨೦೧೧, ರವಿವಾರ
ಸಮಯ: ಸಂಜೆ ೪ ಗಂಟೆ

ಸರ್ವರಿಗೂ ಆದರದ ಸ್ವಾಗತ

ಮಹಾಬಲ ಭಟ್                         ಪ್ರಹ್ಲಾದ ಗುಡಿ
ಸಂಪಾದಕರು                               ಕಾರ್ಯದರ್ಶಿ

 

ಕೊಪ್ಪಳದಲ್ಲಿ ಇಂದು ಸಂಜೆ..

‘ಅಪಾರ’ ಬ್ಲಾಗೂ ಬದಲಾಗಿದೆ..

ಹೊಸ ತಾಜಾ ಅನುಭವಕ್ಕಾಗಿ- ಇಲ್ಲಿ ಕ್ಲಿಕ್ಕಿಸಿ

ಜೋಗಿ ಬರೆದಿದ್ದಾರೆ: ಮಾತಿನ ಹೆಣ ಬಿದ್ದ ಮನಸಿನಂಗಳದಲ್ಲಿ….

‘ಅವಳಿಂದ ನಾನೇನು ಬಯಸುತ್ತಿದ್ದೇನೆ ಅಂತ ಕೇಳಿಕೊಂಡರೆ ಏನೂ ಇಲ್ಲ. ಏನೇನೂ ಇಲ್ಲ. ನಮ್ಮಿಬ್ಬರ ಮಧ್ಯೆ ಸೆಕ್ಸ್ ಇಲ್ಲ. ಅವಳ ದೇಹವನ್ನು ನಾನು ಬಯಸುತ್ತಿಲ್ಲ. ಆದರೂ ಅವಳ ಜೊತೆ ಮಾತಾಡಬೇಕು ಅನ್ನಿಸುತ್ತೆ. ಅವಳಿಗೆ ವ್ಯಾಲೆಂಟೇನ್ ಡೇ ದಿನ ಒಂದು ಸಂದೇಶ ಕಳಿಸಬೇಕು ಅನ್ನಿಸುತ್ತೆ. ಅವಳ ಜೊತೆ ಹರಟುವ ಮನಸ್ಸಾಗುತ್ತೆ. ಏನಿದು ಹೇಳಿ?’

ಗೆಳೆಯ ಕೇಳಿದ. ಅದನ್ನು ಹಂಬಲ ಎಂದು ಕರೆಯುತ್ತಾರೆ ಎನ್ನಬೇಕಿನ್ನಿಸಿತು. ಅದು ಹಂಬಲವೇ ಹೌದಾ, ವ್ಯಾಮೋಹವೂ ಇರಬಹುದಾ, ಅಥವಾ ಒಂದು ಚಟವಾ, ವೈವಿಧ್ಯವನ್ನು ಬಯಸುವ ಮನಸ್ಸಿನ ತುಡಿತವಾ? ನೂರೆಂಟು ಪ್ರಶ್ನೆಗಳು. ಮಾತು ಯಾತನೆಯ ದಿಡ್ಡಿ ಬಾಗಿಲು.

ಅಂಥ ಹಂಬಲ ಅನೇಕರನ್ನು ಕಾಡುವುದನ್ನು ನೋಡಿದ್ದೇನೆ. ಅದು ಅಪಾಯಕಾರಿಯೇನೂ ಅಲ್ಲ. ಸುಮ್ಮನೆ ಒಂದು ಸೆಳೆತ. ಅದು ವಿವಾಹಬಾಹಿರ ಸಂಬಂಧವಾಗಿ ಅರಳುವುದೂ ಇಲ್ಲ. ಹಾಗಂತ ಒಣಗಿ ಹೋಗುವ ಸೆಲೆಯೂ ಅಲ್ಲ. ಹೆಂಡತಿಗೋ ಗಂಡನಿಗೂ ಸಿಟ್ಟು ಬರಿಸುವ, ದಾಂಪತ್ಯದಲ್ಲಿ ಸಣ್ಣದೊಂದು ವಿರಸ ಮೂಡುವಂತೆ ಮಾಡುವ ಅಂಥ ಸಂಬಂಧಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು. ಸುಮ್ಮನೆ ಬಿಟ್ಟುಬಿಡಬೇಕು.

ಇನ್ನಷ್ಟು

‘ಸಂಚಯ’ ಸಾಹಿತ್ಯ ಸಂಜೆ

from Monu to Mahatma

Previous Older Entries